Wednesday, August 9, 2017

"Voice of Dissent"

 ಮತ್ತಾಯ 20:1-16

ಗುಣುಗುಟ್ಟುವುದು ತಪ್ಪೇ? ಗುಣುಗುಟ್ಟುವುದು ಯಾವಾಗಲೂ ನಕಾರಾತ್ಮಕವೇ? ಗುಣುಗುಟ್ಟುವುದು ಅಸಮಾಧಾನದ ಸೂಚಕ ಅಲ್ಲವೇ? ಗುಣುಗುಟ್ಟುವುದು ನ್ಯಾಯಕ್ಕಾಗಿ ಎತ್ತುವ ವಿಭಿನ್ನ ಧ್ವನಿ ಅಲ್ಲವೇ?

ಯೇಸು ಪರಲೋಕರಾಜ್ಯದಲ್ಲಿ ಏಳುವ ಗುಣುಗುಟ್ಟುವಿಕೆಯ ಕುರಿತು ಹೇಳಿದ ಸಾಮ್ಯ ಇವತ್ತಿನ ನಮ್ಮ ಧ್ಯಾನಕ್ಕಾಗಿ ಇರುವ ಪರಿಚ್ಚೇದ. ಒಬ್ಬ ಯಜಮಾನ ತನ್ನ ದ್ರಾಕ್ಷೇತೋಟದಲ್ಲಿ ಒಂದು ದಿನದ ಕೆಲಸಕ್ಕಾಗಿ ಕೂಲಿ ಕಾರ್ಮಿಕರನ್ನು ನೇಮಿಸ್ತಾನೆ. ಇವರಲ್ಲಿ ಕೆಲವರು ಬೆಳಗಿನ ಜಾವದಲ್ಲಿ, ಮತ್ತೆ ಕೆಲವರು 9 ಘಂಟೆ ಸುಮಾರಿಗೆ, ಇನ್ನು ಕೆಲವರು 12 ಘಂಟೆಗೆ, 3 ಘಂಟೆಗೆ ಹಾಗೂ ಐದು ಘಂಟೆಗೆ ಕರೆಯಲ್ಪಟ್ಟವರು. ಸಾಯಂಕಾಲ ಯಜಮಾನ ಎಲ್ಲರನ್ನೂ ಕರೆದು ಎಲ್ಲರಿಗೂ 1 ಪಾವಲಿ ಅಥವಾ ದೆನಾರಿಯುಸ್ಸನ್ನು ಕೊಡ್ತಾನೆ. ಆಗ ಮೊದಲು ಬಂದವರು ಯಜಮಾನನ ವಿರುದ್ಧ ಗುಣುಗುಟ್ಟಿದರು. ಯಜಮಾನ ತನ್ನ ಕ್ರಿಯೆಯನ್ನು ಒಳ್ಳೆಯ ಕ್ರಿಯೆ ಮತ್ತು ಅದು ನ್ಯಾಯ ಎಂದು ಸಮರ್ಥಿಸಿಕೊಳ್ಳುತ್ತಾನೆ.

ಹಗಲೆಲ್ಲಾ ಬಿಸಿಲಿನಲ್ಲಿ ಬೆವರು ಸುರಿಸಿ 8-10 ತಾಸು ದುಡಿದವ್ನಿಗೂ, ಸಂಜೆಯ ತಂಪಿನಲ್ಲಿ ಒಂದು ತಾಸು ದುಡಿದವ್ನಿಗೂ ಸಮಾನ ವೇತನ ಅಂದ್ರೆ, ಅದು ಯಾವ ಸೀಮೆ ನ್ಯಾಯ? ಎಂತವನಿಗಾದ್ರೂ ಅಸಮಾದಾನವಾಗಲೇಬೇಕಾದ ಕ್ರಿಯೆ ಅಲ್ವಾ? 15 ವರ್ಷ ಕಂಪನಿಗಾಗಿ ದುಡಿದವ್ನಿಗೂ ಈಗ ಹೊಸದಾಗಿ ಕೆಲಸಕ್ಕೆ ಸೇರಿದವನಿಗೂ ಸಮಾನ ವೇತನ ಅಂದ್ರೆ 15 ವರ್ಷ ಕಷ್ಟಪಟ್ಟು ದುಡಿದವನಿಗೆ ಅಸಾಮಾದಾನ ಆಗದೇ ಇರ್ತದಾ? 15 ವರ್ಷ ದುಡಿದವನಿಗೆ ಇದು ಯಜಮಾನ ಮಾಡುವ ಅವಮಾನ ಅಲ್ಲದೆ ಇನ್ನೇನು? ಇಂಥ ಅನ್ಯಾಯದ ವೇತನ ವ್ಯವಸ್ಥೆಯ ವಿರುದ್ಧ ಆತ ಗುಣುಗುಟ್ಟುವುದರಲ್ಲಿ ಯಾವ ತಪ್ಪಿದೆ? ಆದರೆ ನಮ್ಮ ಸಭೆ, ಸಮುದಾಯ, ಸಂಸ್ಥೆಗಳು ಇಂಥ ಅನ್ಯಾಯದ ವೇತನ ಪದ್ಧತಿಯನ್ನು ಬಲಹೀನ ಕಾರ್ಮಿಕರ ವಿರುದ್ಧ ಸಮರ್ಥಿಸಿಕೊಂಡು ಬರ್ತಾನೇ ಇದೆ. ನಾವು ಅಂಥ ಸಮರ್ಥನೆಯ ಅವಿಭಾಜ್ಯ ಅಂಗಗಳಾಗಿರುವುದು ಶೋಚನೀಯ. ಇಂಥ ಅನ್ಯಾಯದ ಸಮರ್ಥನೆಗೆ ಯೇಸುವಿನ ಈ ಸಾಮ್ಯವನ್ನು ಕೂಡಾ ಬಳಸಿಕೊಳ್ಳಲಾಗಿದೆ ಅನ್ನೋದು ಮತ್ತಷ್ಟು ಶೋಚನೀಯ.

ಈ ಸಾಮ್ಯದ ಇದುವರೆಗಿನ ಬಹುತೇಕ ವ್ಯಾಖ್ಯಾನಗಳು ಅಸಮಾನ ವೇತನದ ವಿರುದ್ಧ ಗುಣುಗುಟ್ಟಿದ ಕೂಲೀ ಆಳುಗಳಿಗೆ ಖಳನಾಯಕರ ಸ್ಥಾನವನ್ನೇ ನೀಡಿವೆ. ಈ ಕೂಲೀ ಆಳುಗಳು ಕ್ರೈಸ್ತ ಸಭೆಯ ಉಗಮದಿಂದ ಇಂದಿನವರೆಗೂ ಎಲ್ಲಾ ಟೀಕೆಗಳ ಕೇಂದ್ರವಾಗಿದ್ದಾರೆ: ಇವರು ಮನೆಯ ಯಜಮಾನನ ಉದಾರ ಮನಸ್ಸನ್ನು ಅರ್ಥ ಮಾಡಿಕೊಳ್ಳಲಿಲ್ಲ ಅನ್ನೋ ಟೀಕೆ, ಇತರರ ಒಳಿತನ್ನು ಸಹಿಸದ ಸ್ವಾರ್ಥಿಗಳು ಅನ್ನೋ ಆರೋಪ, ಅವರು ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವ ಮನಸ್ಸಿಲ್ಲದ ಪಾಪಿಗಳು ಎಂಬ ಹಣೆಪಟ್ಟಿ – ಇಂತಹ ವ್ಯಾಖ್ಯಾನಗಳಿಂದ ಕಾರ್ಮಿಕರನ್ನು ಬಿಡಿಸುವ ಅಗತ್ಯ ಇವತ್ತು ನಮ್ಮ ಮುಂದಿದೆ. ಅವರ ಗುಣುಗುಟ್ಟುವಿಕೆಯನ್ನು ಪ್ರತಿಭಟನೆಯ ಕೂಗು ಎಂದು ಅರ್ಥವಿಸಬೇಕಾದ ತ್ವರಿತತೆ ನಮ್ಮ ಮುಂದಿದೆ.

ಇದು ಸಾದ್ಯವಾಗಬೇಕಾದರೆ ಈ ಸಾಮ್ಯವನ್ನು ಯೇಸುವಿನ ಕಾಲದ ಪ್ಯಾಲಸ್ತೀನ್‍ನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪುನವ್ರ್ಯಾಖ್ಯಾನಿಸುವ ಅಗತ್ಯ ಇದೆ. ಮತ್ತು ಈ ಸಾಮ್ಯದಲ್ಲಿ ಬರುವ ಮನೆಯ ಮತ್ತು ದ್ರಾಕ್ಷೇತೋಟದ ಯಜಮಾನನನ್ನು ದೇವರು ಅಂತ ಗುರುತಿಸುವ ಈ ವರೆಗಿನ ವ್ಯಾಖ್ಯಾನಗಳನ್ನು ತಿರಸ್ಕರಿಸುವ ಅಗತ್ಯವಿದೆ. ವಚನ ಒಂದರಲ್ಲಿ ಪರಲೋಕ ರಾಜ್ಯವು ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ ಎಂಬ ಮಾತಿದೆ. ಅಂದರೆ ಈ ಮನೆಯ ಯಜಮಾನನು ದೇವರಿಗೆ ಹೋಲಿಕೆಯಾಗಿದ್ದಾನೆ ಎಂಬ ಅರ್ಥ ಇಲ್ಲಿ ಇಲ್ಲ.

ಈ ಸಾಮ್ಯದಲ್ಲಿ ಬರುವ ಮನೆಯ ಯಜಮಾನ ದೇವರಲ್ಲ, ಬದಲು ಒಬ್ಬ ಅಧರ್ಮಿ ಮತ್ತು ಅನ್ಯಾಯಗಾರ ಮನುಷ್ಯ. ಈತ ದ್ರಾಕ್ಷೇತೋಟದ ಯಜಮಾನನಾಗಿದ್ದ ಮತ್ತು ಪಾರುಪತ್ಯಗಾರರನ್ನು ಇಟ್ಟುಕೊಂಡಿದ್ದ ಎನ್ನುವುದು ಆತ ಒಬ್ಬ ಆಗರ್ಭ ಶ್ರೀಮಂತನಿಗೆ ಸೂಚಕ. 1 – 2 ನೇ ಶತಮಾನದ ಪ್ಯಾಲಸ್ತೇನ್‍ನಲ್ಲಿ ದ್ರಾಕ್ಷೇತೋಟಗಳ ಒಡೆತನ ಬಡವ ಅಥವಾ ಮಧ್ಯಮ ವರ್ಗದವರ ಪಾಲಿಗೆ ಕನಸಿನ ಮಾತಾಗಿತ್ತು. ಈ ಹಿಂದಿನ ಪರಿಚ್ಛೇದದಲ್ಲಿ “ನಿಮಗೆ ಸತ್ಯವಾಗಿ ಹೇಳುತ್ತೇನೆ, ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ” ಅಂತ ಹೇಳಿದ ಮತ್ತಾಯನ ಯೇಸು ಇಲ್ಲಿ ಒಬ್ಬ ಐಶ್ವರ್ಯವಂತನನ್ನು ತನ್ನ ಸಾಮ್ಯದಲ್ಲಿ ತರುವ ಮೂಲಕ ತಾನು ಹಿಂದೆ ಆಡಿದ ಮಾತಿನ ಆಳವನ್ನು ಬಿಚ್ಚಿಡುತ್ತಾನೆ.

ಮನೆಯ ಯಜಮಾನ ಒಬ್ಬ ಅಧರ್ಮೀ ಅಥವಾ ಅನ್ಯಾಯಗಾರ. ವಚನ 13ರನ್ನು ಗಮನಿಸಿ. ಈ ವಚನದಲ್ಲಿ ಯಜಮಾನ ತಾನು ಅನ್ಯಾಯ ಮಾಡಲಿಲ್ಲ ಅಂತ ಹೇಳಿಕೊಳ್ತಾನೆ. ಆದ್ರೆ ಇದೇ ವಚನದಲ್ಲಿ ಬರುವ “ನೀನು ನನ್ನ ಸಂಗಡ ಒಂದು ಪಾವಲಿಗೆ ಒಡಂಬಟ್ಟಿಯಲ್ಲಾ” ಅನ್ನೋ ಮಾತನ್ನು ಗಮನಿಸಬೇಕು. ಅಂದರೆ ಈ ಯಜಮಾನ ನಸುಕಿನ ಜಾವದಲ್ಲಿ ಸಿಕ್ಕ ಕೂಲೀ ಆಳುಗಳೊಟ್ಟಿಗೆ ಒಂದು ಚೌಕಾಶೀ ವ್ಯವಹಾರ ಮಾಡಿದ್ದಾನೆ (ಬಾರ್ಗೇನಿಂಗ್ ಬ್ಯುಸಿನೆಸ್). ಪ್ರಾಯಶಃ ಅವರು ಮೂರು ಪಾವಲಿ ಕೇಳಿರಬಹುದು, ಅಥವಾ ಎರಡಾದರೂ ಕೊಡು ಅಂತ ಕೇಳಿರಬಹುದು. ಆದರೆ ಈ ಅಧರ್ಮೀ ಐಶ್ವರ್ಯವಂತ ಯಜಮಾನ ಒಂದು ಪಾವಲಿಗಷ್ಟೇ ಅವರನ್ನು ಕೂಲಿಗೆ ನೇಮಿಸಿಕೊಂಡ. ಚರಿತ್ರಾ ವಿಮರ್ಶಕರ ಪ್ರಕಾರ 2ನೇ ಶತಮಾನದ ಪ್ಯಾಲಸ್ತೇನ್‍ನಲ್ಲಿ ಯೆಹೂದೀ ವೇತನ ಕಾಯ್ದೆ ಚಾಲ್ತಿಯಲ್ಲಿತ್ತು. ಈ ಕಾಯ್ದೆಯನ್ವಯ 0.9 ರಿಂದ 1.10 ದಿನಾರಿಯುಸ್ ಒಬ್ಬ ಕೂಲಿ ಕಾರ್ಮಿಕನ ಕನಿಷ್ಟ ದಿನಗೂಲಿಯಾಗಿತ್ತು. ಅಂದರೆ ಇಲ್ಲಿ ಈ ಯಜಮಾನ ಕೇವಲ ಕನಿಷ್ಟ ವೇತನಕ್ಕಷ್ಟೇ ಕೂಲಿಯಾಳುಗಳನ್ನು ನಿಗದಿ ಪಡಿಸಿಕೊಂಡಿದ್ದ. ಕಡೆಗೆ ಬಂದವರಿಗೆ ಸಹ ಕನಿಷ್ಟವೇತನವನ್ನಷ್ಟೇ ಕೊಡುತ್ತಾನೆ. ಇಲ್ಲಿ ಬೆಳಗಿನಿಂದ ಬಿಸಿಲಿನಲ್ಲಿ ದುಡಿದವರ ಚಕಾರ ಇರುವುದು ಕಡೆಗೆ ಬಂದವರಿಗೆ ಕಡಿಮೆ ಸಿಗಬೇಕು ಎಂದಲ್ಲ, ಬದಲು ಬೆಳಗ್ಗಿನಿಂದ ದುಡಿದವರಿಗೆ ಕನಿಷ್ಟ ವೇತನಕ್ಕಿಂತ ಹೆಚ್ಚಿನದ್ದು ಸಿಗಬೇಕು, ಆ ಮೂಲಕ ಅವರ ದುಡಿಮೆ ಮತ್ತು ಸೀನಿಯಾರಿಟಿ ಗುರುತಿಸಲ್ಪಡಬೇಕು ಎಂಬ ಸಹಜ ಮತ್ತು ಯತಾರ್ಥ ಕಾಳಜಿ. 

ಮನೆಯ ಯಜಮಾನ ಒಬ್ಬ ಅಧರ್ಮೀ ಅಥವಾ ಅನ್ಯಾಯಗಾರ. ಇವನಿಗೆ ತಾನು ಒಳ್ಳೆಯವನು ಅಂತ ಕರೆಸಿಕೊಳ್ಳುವ ಚಟ. “ನಾನು ಒಳ್ಳೆಯವನಾಗಿರುವುದು ನಿನ್ನ ಕಣ್ಣನ್ನು ಒತ್ತುತ್ತದೋ?” ಇದು ಯಜಮಾನನ ಮಾತು. ಈತ ಯಾರಿಗೆ ಒಳ್ಳೆಯದು ಮಾಡಿದ? ಮೇಲ್ನೋಟಕ್ಕೆ ಕಡೆಯಲ್ಲಿ ಬಂದವರಿಗೆ ಅಂತ ಕಾಣಿಸ್ತದೆ. ಆದ್ರೆ ಈತ ಅವರಿಗೆ ಕೊಟ್ಟಿದ್ದು ಅವರಿಗೆ ಸಲ್ಲಬೇಕಾದದ್ದನ್ನಷ್ಟೇ. ಕೇವಲ ಒಂದು ಕನಿಷ್ಟ ವೇತನ. ಇದೇ ಭಾಗದ ಹಿಂದಿನ ಪರಿಚ್ಛೇದದಲ್ಲಿ ನಿತ್ಯಜೀವದ ಹುಡುಕಾಟದಲ್ಲಿದ್ದ ಒಬ್ಬ ಐಶ್ವರ್ಯವಂತನಿಗೆ ಯೇಸು ಹೇಳ್ತಾನೆ, “ಒಳ್ಳೇದನ್ನು ಕುರಿತು ನನ್ನನ್ನು ಯಾಕೆ ಕೇಳುತ್ತೀ?” ಅಥವಾ ಮಾರ್ಕನ ಪ್ರಕಾರ “ನನ್ನನ್ನು  ಒಳ್ಳೆಯವನೆಂದು ಯಾಕೆ ಹೇಳುತ್ತೀ?” ಆ ಮೂಲಕ ಯೇಸು ತನ್ನ ಧೀನತೆಯನ್ನು ಮೆರೆಯುತ್ತಾನೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸಾಮ್ಯದಲ್ಲಿ ಬರುವ ಈ ಮನೆಯ ಯಜಮಾನ ತನ್ನನ್ನು “ಒಳ್ಳೆಯವನು” ಅಂತ ಉದ್ಧಟತನದಿಂದ ಕರೆದುಕೊಳ್ತಾನೆ. ಈ ಅಧರ್ಮಿಗೆ ಒಳ್ಳೆಯವನು ಅಂತ ಕರೆಸಿಕೊಳ್ಳುವ ಚಟ.

“ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ?” ಎನ್ನುವ ಇವನ ಮಾತಿನಲ್ಲಿ ಯೇಸು ಆತನ “ಅಹಂ” ಕೇಂದ್ರಿತ ಮನೋಭಾವವನ್ನು ಕೇಳುಗರ ಮುಂದೆ ಬಿಚ್ಚಿಡುತ್ತಾನೆ. ಯಹೂದೀ ಸಂದರ್ಭದಲ್ಲಿ ಭೂಮಿಯ ಒಡೆತನ ಯಹೋವನಿಗೆ ಸೇರಿದ್ದು. ಯೆಹೋವ ಕೊಟ್ಟ ಭೂಮಿಯನ್ನು ಅಥವಾ ಆಸ್ತಿಯನ್ನು ತನಗಿಷ್ಟ ಬಂದಂತೆ ಉಪಯೋಗಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ಕಾರಣದಿಂದಲೇ ಪ್ರತೀ ಜ್ಯಬಿಲಿ ವರ್ಷದಲ್ಲಿ ಭೂಮಿಯ ಪುನರ್ಹಂಚುವಿಕೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ “ನನ್ನ ಆಸ್ತಿಯನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ?” ಎಂಬ ಮನೆಯ ಯಜಮಾನನ ಮಾತು ಉದ್ಧಟದ ಮಾತು ಮತ್ತು ದೇವದೂಷಣೆ ಕೂಡಾ. ಸಾಮಾಜಿಕ ಜವಾಬ್ಧಾರಿಯನ್ನು ಮರೆತ ಮೂಡ ಈ ಯಜಮಾನ.

ಇಲ್ಲಿ ಗುಣುಗುಟ್ಟುವ ಕೂಲೀ ಕಾರ್ಮಿಕರ ಅಹವಾಲಾದರೂ ಏನು? ಅವರು ಅವಮಾನಕ್ಕೆ ಒಳಗಾಗಿದ್ದಾರೆ. ಕೊನೆಗೆ ಬಂದವರಿಗೆ ಮೊದಲು ವೇತನ ಕೊಡುವ ಮೂಲಕ ಹಾಗೂ ಸಮಾನ ವೇತನ ಕೊಡುವ ಮೂಲಕ ಯಜಮಾನ ಮೊದಲು ಬಂದವರನ್ನು ಅವಮಾನ ಪಡಿಸಿದ್ದಾನೆ. ಅವರ ದಿನವಿಡಿಯ ಪರಿಶ್ರಮವನ್ನು ಅಲ್ಲಗಳೆದಿದ್ದಾನೆ ಮತ್ತು ಅವಮಾನಕ್ಕೆ ಗುರಿಪಡಿಸಿದ್ದಾನೆ. ಇಂಥ ಅವಮಾನದ ವಿರುದ್ಧ ಅವರು ಪ್ರತಿಕ್ರಿಯಿಸುತ್ತಾರೆ. ಅವರ ಗುಣುಗುಟ್ಟುವಿಕೆ ತಮಗಾದ ಅವಮಾನದ ಮತ್ತು ಅನ್ಯಾಯದ ವಿರುದ್ಧ ಅವರು ಎತ್ತುವ ಕೂಗು. ಒಬ್ಬನಿಗೆ ಒಳ್ಳೆಯದನ್ನು ಮಾಡಿದ್ದೇನೆ ಅಂತ ಹೇಳುವಮೂಲಕ ಮತ್ತೊಬ್ಬನನ್ನು ಅವಮಾನಿಸುವ ಈ ಯಜಮಾನ ಕಾರ್ಮಿಕರ ನಡುವೆ ಮನಸ್ತಾಪವನ್ನು ಬಿತ್ತುತ್ತಾನೆ, ಆ ಮೂಲಕ ಒಡೆದು ಆಳುವ ನೀತಿಯನ್ನು ಸ್ಥಾಪಿಸ್ತಾನೆ. ತನ್ನ ಬೇಳೆ ಬೇಯಿಸಿಕೊಳ್ಳಲು ನಿರುದ್ಯೋಗಿಗಳಾಗಿದ್ದ ಜನರನ್ನು ಕರೆದು ಉದ್ಯೋಗ ನೀಡುತ್ತಾನೆ. ಆದರೆ ಅವರಿಗೆ ಕೊಡುವ ಸಂಬಳವನ್ನು ಮೊದಲೇ ನಿರ್ಧರಿಸುವುದಿಲ್ಲ. ಅವರೂ ಕೂಡಾ ತಮ್ಮ ಶೋಚನೀಯ ನಿರುದ್ಯೋಗದ ದೆಸೆಯಿಂದ ಯಾವ ಚೌಕಾಶಿಯನ್ನೂ ಮಾಡದೆ ಅವನ ಅಪ್ಪಣೆಯನ್ನು ಪರಿಪಾಲಿಸುತ್ತಾರೆ. ಅವರ ಬಲಹೀನತೆಯನ್ನು ಬಳಸಿಕೊಳ್ಳುವ ಈ ಯಜಮಾನ ತಾನು ಒಳ್ಳೆಯವನಂತೆ ಸೋಗು ಹಾಕಿಕೊಳ್ಳುತ್ತಾನೆ.

ನಮ್ಮ ಸಭೆ, ಸಮುದಾಯ ಮತ್ತು ಸಂಸ್ಥೆಗಳಲ್ಲಿ ಇಂತಹುದೇ ಅದೆಷ್ಟೋ ಗುಣುಗುಟ್ಟುವಿಕೆಯನ್ನು ನಾವು ಕೇಳುವುದಿಲ್ಲ? ಕೆಲವೊಮ್ಮೆ ಧ್ವನಿಯೆತ್ತಿದರೆ ಎಲ್ಲಿ ನಮ್ಮ ಮತ್ತು ನಮ್ಮ ಮಕ್ಕಳ, ಕುಟುಂಬದ ಭವಿಷ್ಯಕ್ಕೆ ಕಂಟಕ ಬರುತ್ತದೋ ಎಂಬ ಭಯದಿಂದ ಕೇವಲ ತಮ್ಮ ತಮ್ಮಲ್ಲೇ ಗುಣುಗುಟ್ಟಿಕೊಳ್ಳುತ್ತಾ ತಮ್ಮ ನೋವನ್ನು ನುಂಗಿಕೊಳ್ಳುವ ಅದೆಷ್ಟು ಕಾರ್ಮಿಕರು ನಮ್ಮ ಮಧ್ಯದಲ್ಲಿಲ್ಲ? ಈ ಸಾಮ್ಯದ ಯಜಮಾನನನ್ನು ದೇವರು ಎಂದು ತಪ್ಪಾಗಿ ಗುರುತಿಸಿ ನಮ್ಮ ಅಸಮಾನ ವೇತನ ಕ್ರಮವನ್ನು ದೇವರ ನ್ಯಾಯ ಅಂತ ಸಮರ್ಥಿಸಿಕೊಳ್ಳುವ ಯತ್ನಗಳು ನಮ್ಮಲ್ಲಿ ನಡೆಯುವುದಿಲ್ಲವೋ? ನ್ಯಾಯಕ್ಕಾಗಿ ಗುಣುಗುಟ್ಟುವ ಧ್ವನಿಗಳನ್ನು “ಗುಣುಗುಟ್ಟುವುದು ಪಾಪ” ಎಂದು ಲೇಬಲ್ ಮಾಡಿ ಅವರ ಹೋರಾಟವನ್ನು ಹುಟ್ಟಿನಲ್ಲಿಯೇ ಹೊಸಕಿಹಾಕುವ ಯತ್ನಗಳು ಅವೆಷ್ಟೋ. ಇಸ್ರಾಯೇಲ್ಯರು ಗುಣುಗುಟ್ಟಿದ್ದರಿಂದ ದೇವರ ಶಾಪಕ್ಕೆ ಗುರಿಯಾದರು. ಇದು ನಾವು ಬಹಳ ಹಿಂದಿನಿಂದಲೂ ಕೇಳುತ್ತಿರುವ ವ್ಯಾಖ್ಯಾನ. ಇಂಥ ವ್ಯಾಖ್ಯಾನಗಳ ಮೂಲಕ ಚರಿತ್ರೆಯಲ್ಲಾದ ದೇವರ ಕಾರ್ಯವನ್ನೇ ಅಡಿ ಮೇಲು ಮಾಡುವ ಹುನ್ನಾರಗಳು ನಡೆಯುತ್ತಲೇ ಇವೆ. ಆದರೆ ಇಸ್ರಾಯೇಲ್ಯರ ಗುಣುಗುಟ್ಟುವಿಕೆ ಮೌನವಾಗಿದ್ದ ದೇವರನ್ನು ಕಾರ್ಯತತ್ಪರನನ್ನಾಗಿಸಿತು, ಲಾವಕ್ಕಿ ಮನ್ನಗಳನ್ನು ಆತ ಸುರಿಸುವಂತಾಯ್ತು. ಇಂಥ ಪರಲೋಕರಾಜ್ಯದ ಸತ್ಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುವ ಕೊಳಕು ರಾಜಕೀಯ ನಮ್ಮ ಸಭೆ, ಸಮಾಜ ಮತ್ತು ಸಂಸ್ಥೆಗಳಲ್ಲಿ ಯಾವಾಗಲೂ ನಡೆಯುತ್ತಲೇ ಇದೆ. ಆದರೆ ದೇವರು ಜನರ ಗುಣುಗುಟ್ಟುವಿಕೆಯನ್ನೂ ಗಂಭೀರವಾಗಿ ಪರಿಗಣಿಸುವ ದೇವರು. ಗುಣುಗುಟ್ಟುವಿಕೆ ನ್ಯಾಯದ ಪರ ಬಲಹೀನರ ಕೂಗು ಮತ್ತು ಅಂತಹ ಕೂಗಿಗೆ ಕಿವಿಗೊಡುವ ಕರೆ ನಮ್ಮ ಮುಂದಿದೆ. ಕಾರ್ಮಿಕರ ಗುಣುಗುಟ್ಟುವಿಕೆಗೆ ಕಿವಿಗೊಟ್ಟು ಅವರ ಅಹವಾಲುಗಳನ್ನು ಕೇಳಿಸಿಕೊಂಡು ಅದಕ್ಕೆ ಯತಾರ್ಥವಾಗಿ ಸ್ಪಂದಿಸುವ ವಿಶಾಲ ಮನಸ್ಸನ್ನು ದೇವರು ನಮಗೆ ಅನುಗ್ರಹಿಸಲಿ.









No comments:

Post a Comment